ದಾವಣಗೆರೆ: ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ರೇಣುಕಾದೇವಿಯ ನೂತನ ದೇಗುಲ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಗುಂಪೊಂದನ್ನು ಗ್ರಾಮಸ್ಥರು ತಡೆದು ದೇವಸ್ಥಾನದಲ್ಲಿ ಸೇರಿಸಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಹಲ್ಲೆಗೆ ಒಳಗಾದವರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು, ಕಾರೇಹಳ್ಳಿ ದಾಸರಹಟ್ಟಿ ಮೂಲದ ನಾರಾಯಣ, ಮಂಜುನಾಥ್, ಚಂದ್ರಶೇಖರ್, ರಮೇಶ್ ಮತ್ತು ಶಿವಪ್ಪ ಎಂದು ಗುರುತಿಸಲಾಗಿದೆ.
ಈ ಗುಂಪು ದಾವಣಗೆರೆ ಹಾಗೂ ಚನ್ನಗಿರಿ ತಾಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಕಾರೇಹಳ್ಳಿ ದಾಸರಹಟ್ಟಿಯಲ್ಲಿ ನಿರ್ಮಾಣವಾಗುತ್ತಿರುವ ರೇಣುಕಾ ಯಲ್ಲಮ್ಮದೇವಿ ದೇಗುಲ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿತ್ತು. ಗ್ರಾಮದ ಆರ್ಥಿಕವಾಗಿ ಸ್ಥಿರ ಕುಟುಂಬಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚಿ ದೇಣಿಗೆ ಕೇಳಲಾಗುತ್ತಿದ್ದುದಾಗಿ ತಿಳಿದುಬಂದಿದೆ.
ಗ್ರಾಮಸ್ಥರ ಮಾಹಿತಿಯಂತೆ ಅನೇಕರು ₹1,000 ರಿಂದ ₹25,000 ತನಕ ದೇಣಿಗೆ ನೀಡಿರುವುದು ತಿಳಿದುಬಂದಿದೆ.
