ಮಹಿಳಾ ದೌರ್ಜನ್ಯ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ
ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳ ಮೇಲಿನ ಹೆಚ್ಚುತ್ತಿರುವ ಹಿಂಸೆ ಹಾಗೂ ದೌರ್ಜನ್ಯಗಳ ವಿರುದ್ಧ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ರಾಜ್ಯವ್ಯಾಪಿ ಸಹಿ ಸಂಗ್ರಹ ಅಭಿಯಾನಕ್ಕೆ ಹರಿಹರ ಬಳಿಯ ಮೈತ್ರಿ ವನದಲ್ಲಿ ಚಾಲನೆ ನೀಡಿದೆ.
ಈ ಅಭಿಯಾನ ಈಗಾಗಲೇ ಆರಂಭವಾಗಿದ್ದು, ಮುಂದಿನ ಮಾರ್ಚ್ ವರೆಗೆ ಮುಂದುವರಿಯಲಿದೆ. ಸಹಿ ಸಂಗ್ರಹಣೆಯ ಜೊತೆಗೆ ಪ್ರತಿಭಟನೆಗಳು, ಜಾಗೃತಿ ಸಭೆಗಳು ಮತ್ತು ಸಾರ್ವಜನಿಕ ಸಂವಾದ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಇಸ್ಮಾಯಿಲ್, “ಲಕ್ಷಾಂತರ ಹೆಣ್ಣು ಮಕ್ಕಳಿಗೆ ಶಿಕ್ಷಣ ಇನ್ನೂ ಮರೀಚಿಕೆ ಆಗಿದೆ; ಪ್ರತಿದಿನ ಸಾವಿರಾರು ಮಹಿಳೆಯರು ಅತ್ಯಾಚಾರ, ಪೀಡನೆ ಮತ್ತು ಹಿಂಸೆಗೆ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿ,” ಎಂದು ಹೇಳಿದರು.
ಎಐಎಂಎಸ್ಎಸ್ ಅಧ್ಯಕ್ಷೆ ಶ್ರೀಮತಿ ರಶ್ಮಿ, 2024ರಲ್ಲಿ ಇಸ್ರೋದ ಮಹಿಳಾ ಎಂಜಿನಿಯರ್ಗಳು ಸಂಪೂರ್ಣವಾಗಿ ವಿನ್ಯಾಸಗೊಳಿಸಿದ ನ್ಯಾನೋ ಉಪಗ್ರಹ ಮತ್ತು ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಸಾಧನೆಗಳನ್ನು ಉಲ್ಲೇಖಿಸಿ, “ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸುತ್ತಿದ್ದರೂ, ದೌರ್ಜನ್ಯ ಮತ್ತು ಅಸುರಕ್ಷಿತ ಪರಿಸ್ಥಿತಿಗಳು ಅವರನ್ನು ಹಿಂದೆ ತಳ್ಳುತ್ತಿವೆ,” ಎಂದು ವಿಷಾದ ವ್ಯಕ್ತಪಡಿಸಿದರು. ನಿರ್ಭಯ, ಆಸಿಫಾ, ಸೌಜನ್ಯ ಹಾಗೂ ಹುಬ್ಬಳ್ಳಿಯಲ್ಲಿ ನಡೆದ 5 ವರ್ಷದ ಬಾಲಕಿಯ ಮೇಲಿನ ದೌರ್ಜನ್ಯ ಸೇರಿದಂತೆ ಹಲವಾರು ಪ್ರಕರಣಗಳನ್ನು ಸ್ಮರಿಸಿ, “ಸ್ತ್ರೀ–ಪುರುಷ ಭೇದವಿಲ್ಲದೆ ಸಮಾಜವೇ ಒಗ್ಗಟ್ಟಿನಿಂದ ಬಲಿಷ್ಠ ಹೋರಾಟ ನಡೆಸಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಭಾರತಿ, ಪದಾಧಿಕಾರಿಗಳಾದ ಸುಮಾ, ಮಮತಾ, ಮಂಜುಳಾ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
