
ನಂದೀಶ್ ಭದ್ರಾವತಿ, ಶಿವಮೊಗ್ಗ
ಸೊಂಟ, ನೋವು, ಮೈ ಕೋವು…ಆಸ್ಪತ್ರೆಗೆ ತೋರಿಸಲು ಹಣ ಇಲ್ಲ…ಮೂರು ತಿಂಗಳಿನಿಂದ ಪಿಂಚಣಿ ಇಲ್ಲ…ನಮ್ಮನ್ನು ನೋಡೋರೋ ಯಾರು ?…ನಾನು ಒಬ್ಬಳೇ ಇರೋದು…ಗಂಡ ದೇವರ ಪಾದ ಸೇರಿದ್ದಾನೆ..ವಿಧವಾ ವೇತನ ಇಲ್ಲ…ನಾನು ವಿಕಲಚೇತನ ನನಗೆ ಬರುವ ಹಣ ನಿಲ್ಲಿಸಿದ್ದಾರೆ...ನಂದು ಬಿಪಿಎಲ್ ಕಾರ್ಡ್ ಇತ್ತು…ಅದನ್ನು ಎಪಿಎಲ್ ಮಾಡಿದ್ದಾರೆ…ಪಡಿತರ ಬರುತ್ತಿಲ್ಲ….

ಇದು…ಭದ್ರಾವತಿ ನಗರದಲ್ಲಿ ಸಾಮಾಜಿಕ ಭದ್ರತೆ ಅಡಿಯಲ್ಲಿ ಬರುವ ಜನರು ಕನಕ ಮಂಟಪದಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಗಣೇಶ್ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು ಹತ್ತು ಸಾವಿರ ಜನರಿಗೆ ತಾಲೂಕಿನಲ್ಲಿ ಸಾಮಾಜಿಕ ಭದ್ರತೆಯಡಿ ಹಣ ಬಂದಿಲ್ಲದ ಕಾರಣ ವಯೋವೃದ್ದರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ
ಅಲೆದಾಟ ಕಾಮನ್
ಕಳೆದ 3-4 ತಿಂಗಳಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಹಣ ಬಾರದ ಹಿನ್ನೆಲೆಯಲ್ಲಿ ನೂರಾರು ವೃದ್ಧರು, ಮಹಿಳೆಯರು, ಅಂಗವಿಕಲ ಫಲಾನುಭವಿಗಳು ಪಿಂಚಣಿಗಾಗಿ ಬ್ಯಾಂಕ್, ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿಗಳ ನಡುವೆ ಅಲೆದಾಡುತ್ತಿದ್ದಾರೆ. ಒಟ್ಟಾರೆ ಕಳೆದ 3-4 ತಿಂಗಳಿಂದ ಬಾರದ ಪಿಂಚಣಿ ಯಾರನ್ನು ಕೇಳುವುದು? ಎಂಬ ಪ್ರಶ್ನೆಗೆ ಈ ಕಾರ್ಯಕ್ರಮ ಅನುಕೂಲಕರವಾಯಿತು.
ವಿಶೇಷಚೇತರಿಗೆ ಬಾರದ ಹಣ
ನಾನೊಬ್ಬ ಅಂಗವಿಕಲ ನನಗೆ 3 ತಿಂಗಳಿಂದ ಹಣ ಜಮೆ ಆಗಿಲ್ಲ. ಈ ಬಗ್ಗೆ ಅಂಚೆ ಕಚೇರಿಯಲ್ಲಿ ಕೇಳಿದರೆ ಬ್ಯಾಂಕಿನಲ್ಲಿ ಕೇಳಿ ಅಂತಾರೆ, ಬ್ಯಾಂಕ್ನಲ್ಲಿ ಕೇಳಿದರೆ ತಹಶೀಲ್ದಾರ್ ಆಫೀಸ್ಗೆ ಹೋಗು ಅಂತಾರೆ, ಯಾರನ್ನು ಕೇಳಬೇಕು ಎನ್ನುವುದೇ ತಿಳಿಯದಾಗಿದೆ’ ಎಂದು ವಿಶೇಷ ಚೇತನರೊಬ್ಬರು ಬೇಸರ ವ್ಯಕ್ತಪಡಿಸಿದರು.
‘ನಮಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಕಳೆದ ಜನವರಿ ತಿಂಗಳಿಂದ ಹಣ ಜಮೆ ಆಗಿಲ್ಲ. ಮೊದಲು ಅಂಚೆ ಕಚೇರಿಯಲ್ಲಿ ಐಪಿಪಿ ಖಾತೆಗೆ ಬರುತ್ತಿದ್ದವು. ಅವರು ಹೆಬ್ಬಟ್ಟು ಒತ್ತಿಸಿ ಹಣ ನೀಡುತ್ತಿದ್ದರು. ಆದರೆ, ಈಗ ಏಕಾಏಕಿ ಹಣ ಬರುವುದು ನಿಂತಿವೆ. ಇದರ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಕೇಳಿದರೆ ಖಾತೆ ಚಾಲನೆ ಮಾಡಲಾಗುವುದು . ಇವರೆಗೆ ಹಣ ಜಮೆ ಆಗಿಲ್ಲ. ಈ ಬಗ್ಗೆ ಪುನಃ ಕೇಳಿದರೆ ಬ್ಯಾಂಕ್ನಲ್ಲಿ ಕೇಳು ಅಂತಾರೆ, ಬ್ಯಾಂಕ್ನಲ್ಲಿ ಕೇಳಿದರೆ ತಹಶೀಲ್ದಾರ್ ಕಚೇರಿಯಲ್ಲಿ ಕೇಳಿ ಎಂದು ಪುನಃ ಕಳುಹಿಸುತ್ತಾರೆ. ಹೀಗೆ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಅಲೆಯುವುದೇ ಆಗಿದೆ. ಆದರೆ ಹಣ ಮಾತ್ರ ಜಮಾ ಆಗಿಲ್ಲ’ ಎಂಬ ಬೇಸರ ವ್ಯಕ್ತವಾಯಿತು.
‘ಅಂಗವಿಕಲ, ಸಂಧ್ಯಾ ಸುರಕ್ಷಾ ಸೇರಿದಂತೆ ಹೀಗೆ ಸರ್ಕಾರದ ವಿವಿಧ ಯೋಜನೆಗಳಿಂದ ಪಿಂಚಣಿ ಪಡೆಯುತ್ತಿರುವ ಬಹುತೇಕ ಫಲಾನುಭವಿಗಳ ಖಾತೆಗೆ ಕಳೆದ ನಾಲ್ಕೈದು ತಿಂಗಳಿಂದ ಹಣ ಜಮಾ ಆಗದೇ ಇದ್ದು ಈ ಕುರಿತು ವಿಚಾರಣೆಗೆ ತಹಶೀಲ್ದಾರ್ ಕಚೇರಿಗೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಪರಿಹಾರ ಮಾತ್ರ ಶೂನ್ಯವಾಗಿದೆ. ಅಲ್ಲದೇ ಇಂತಹ ಫಲಾನುಭವಿಗಳಿಗೆ ಸಹಾಯ ಮಾಡುವ ನೆಪದಲ್ಲಿ ಮಧ್ಯವರ್ತಿಗಳು ಸಹ ಹುಟ್ಟಿಕೊಂಡಿದ್ದು ಇವರು ಸಹ 4 ತಿಂಗಳ ಹಣ ಒಮ್ಮೇಲೆ ಬರುವಂತೆ ಮಾಡುತ್ತೇವೆ ಎಂಬ ಮಾತುಗಳಿಂದ ನಂಬಿಸಿ ರೂ. 2 ಸಾವಿರದ ವರೆಗೆ ಹಣ ಪಡೆದಿದ್ದಾರೆ. ಆದರೆ, ಪರಿಹಾರ ಮಾತ್ರ ದೊರೆತಿಲ್ಲ’ ಎಂದು ಇನ್ನು ಕೆಲವರು ಆರೋಪಿಸುತ್ತಾರೆ.

